ಕಲ್ಲಾಡಿ ವಿಠಲ ಶೆಟ್ಟಿ ಸಂಸ್ಮರಣೆ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ನವ೦ಬರ್ 3 , 2014
|
ನವ೦ಬರ್ 3, 2014
|
ಕಲ್ಲಾಡಿ ವಿಠಲ ಶೆಟ್ಟಿ ಸಂಸ್ಮರಣೆ
ಕೊಣಾಜೆ :
ಯಕ್ಷಗಾನ ಕ್ಷೇತ್ರದಲ್ಲಿ ಧನ ಸಂಪತ್ತು ಸಂಗ್ರಹಿಸದಿದ್ದರೂ ಅಪಾರವಾದ ಅಭಿಮಾನಿ ಸಂಪತ್ತು ಸಂಪಾದಿಸಿದ್ದು, ಯಕ್ಷಗಾನದ ಮಹಾಪೋಷಕ, ಕಟೀಲು ಮೇಳದ ಯಜಮಾನ ಕಲ್ಲಾಡಿ ವಿಠಲ ಶೆಟ್ಟಿ ರಿಗೆ ಇದಕ್ಕಿಂತ ದೊಡ್ಡ ಸಂತಸ ಬೇರೊಂದಿಲ್ಲ ಎಂದು ಹಿರಿಯ ಯಕ್ಷಗಾನ ಕಲಾವಿದ ಕೋಳ್ಯೂರು ರಾಮಚಂದ್ರ ರಾವ್ ಅಭಿಪ್ರಾಯಪಟ್ಟರು.
ಇರಾ ಕುಂಡಾವು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬಯಲು ರಂಗಮಂಟಪದಲ್ಲಿ ಭಾನುವಾರ ಕಲ್ಲಾಡಿ ವಿಠಲ ಶೆಟ್ಟಿ ಸೇವಾ ಟ್ರಸ್ಟ್ ಆಶ್ರಯದಲ್ಲಿ ನಡೆದ ಇರ ಕುಂಡಾವು ಶ್ರೀ ಸೋಮನಾಥೇಶ್ವರ ದೇವಳ ಆಡಳಿತ ಮೊಕ್ತೇಸರ, ಕಟೀಲು ಮೇಳದ ಯಜಮಾನ ಕಲ್ಲಾಡಿ ವಿಠಲ ಶೆಟ್ಟಿ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ವಿಠಲ ಶೆಟ್ಟಿ ಅವರು ಯಕ್ಷಗಾನ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಅನನ್ಯ. ಅವರು ಎಂದಿಗೂ ತಮ್ಮ ಯಜಮಾನತ್ವದಲ್ಲಿದ್ದ ಮೇಳದ ಕಲಾವಿದರನ್ನು ತುಚ್ಛವಾಗಿ ಕಂಡಿದ್ದು ಅಥವಾ ಮಾತನಾಡಿಸಿದ್ದು ಇಲ್ಲ. ಕಲಾವಿದರ ನೋವು ನಲಿವುಗಳಲ್ಲಿ ಸ್ಪಂದಿಸುತ್ತಾ ಯಜಮಾನ ಹಾಗೂ ಕಲಾವಿದನ ನಡುವಿನ ಬಾಂಧವ್ಯ ಇನ್ನಷ್ಟು ಗಟ್ಟಿಗೊಳಿಸಿದ್ದರು. ಆ ಕಾರಣದಿಂದ ಅವರನ್ನು ಗೌರವಿಸುವ ಸಾಕಷ್ಟು ಕಲಾವಿದರು ಹಾಗೂ ಅಭಿಮಾನಿಗಳು ಇದ್ದಾರೆ ಎಂದು ನುಡಿದರು.
ಸನ್ಮಾನ ಸ್ವೀಕರಿಸಿದ ಅಂತಾರಾಷ್ಟ್ರೀಯ ಕ್ರೀಡಾಪಟು ಇರಾ ಲಲಿತಾ ಜಯರಾಂ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದ್ದು ಕ್ಷೇತ್ರದ ಮೇಲಿನ ನಂಬಿಕೆ ಹಾಗೂ ಸ್ಥಳೀಯರ ಸಹಕಾರದಿಂದ ಎಂದರು.
ಕಟೀಲು ಮೇಳದ ಹಿರಿಯ ಕಲಾವಿದ ಮಂಜೇಶ್ವರ ಜನಾರ್ದನ ಜೋಗಿ ಪರವಾಗಿ ಅವರ ಪತ್ನಿ ವಾರಿಜಾ ಜನಾರ್ದನ ಜೋಗಿ ಅವರನ್ನು ಸನ್ಮಾನಿಸಿ, ಆರ್ಥಿಕ ಸಹಾಯ ನೀಡಲಾಯಿತು. ಅಂತಾರಾಷ್ಟ್ರೀಯ ಕ್ರೀಡಾಪಟು ಲಲಿತಾ ಜಯರಾಂ ಹಾಗೂ ಹಿರಿಯ ಪಾಕತಜ್ಞ ಕುಕ್ಕೆಬೆಟ್ಟು ಕಲ್ಲಡ್ಕ ಕೃಷ್ಣ ಅವರನ್ನು ಸನ್ಮಾನಿಸಲಾಯಿತು. ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡುತ್ತಿರುವ ಉಮೇಶ್ ಶೆಟ್ಟಿ ಉಬರಡ್ಕ ಮತ್ತು ಗಣೇಶ್ ಆಚಾರ್ಯ ಅವರನ್ನು ಗೌರವಿಸಲಾಯಿತು. ಇಂಡಿಯನ್ ವೈಟ್ಲಿಫ್ಟಿಂಗ್ ಫೆಡರೇಶನ್ ಕಾರ್ಯದರ್ಶಿ ದರ್ಬೆ ಚಂದ್ರಹಾಸ ರೈ ಅಧ್ಯಕ್ಷತೆ ವಹಿಸಿದ್ದರು. ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ ಹಾಗೂ ಕೇಶವ ಕೊಟ್ಟಾರಿ ಉಪಸ್ಥಿತರಿದ್ದರು.
ಪ್ರದೀಪ್ ಕುಮಾರ್ ಗಟ್ಟಿ ಬಳಗದಿಂದ ಯಕ್ಷಗಾನ ಶೈಲಿಯಲ್ಲಿ ಪ್ರಾರ್ಥನೆ ನಡೆಯಿತು. ವಿಠಲ ಶೆಟ್ಟಿ ಸೇವಾ ಟ್ರಸ್ಟ್ ಅಧ್ಯಕ್ಷ ಜಗದೀಶ ಶೆಟ್ಟಿ ಇರಾಗುತ್ತು ಸ್ವಾಗತಿಸಿದರು. ಕಾರ್ಯದರ್ಶಿ ವೈ.ಬಿ.ಸುಂದರ್ ಇರಾ ವಂದಿಸಿದರು. ಕೋಶಾಧಿಕಾರಿ ಪುಷ್ಪರಾಜ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು. ಸಂಸ್ಮರಣಾ ಕಾರ್ಯಕ್ರಮದಲ್ಲಿ ಬೆಳಗ್ಗೆ 11.30ರಿಂದ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ ಮಕ್ಕಳಿಂದ 'ಗುರುದಕ್ಷಿಣೆ'' ಯಕ್ಷಗಾನ ಪ್ರದರ್ಶನ ಹಾಗೂ ಮಧ್ಯಾಹ್ನ ತೆಂಕುತಿಟ್ಟಿನ ಖ್ಯಾತ ಕಲಾವಿದರಿಂದ 'ಭೀಷ್ಮ ವಿಜಯ', 'ಬಬ್ರುವಾಹನ ಕಾಳಗ' ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು.
ಕೃಪೆ :
http://www.vijaykarnataka.com
|
|
|